Monday, January 12, 2009

ಹೊಟ್ಟೆಪಾಡಿನ ದಾರಿ


"ಯಾವುದಾದ್ರೂ ದೇವರ ಪಟ ಬೇಕೆ ತಗೊಳ್ಳಿ ಸರ್"
ಪರಿಚಿತ ದನಿ
ಹಿಂದಿರುಗಿ ನೋಡಿದೆ
ಪ್ಲಾಸ್ಟಿಕ್ ಕಟ್ಟಿನಲ್ಲಿ ಎಲ್ಲ ದೇವರುಗಳು
ನಸುನಗುತ ನಿಂತಿದ್ದರು-
ಬರೀ ಹದಿನೈದು ರುಪಾಯಿಗೆ
ಕೆಲವರು ನಿಂತರು, ದಿಟ್ಟಿಸಿದರು
ಕೆಲವರು ಚೌಕಾಶಿ ಮಾಡಿದರು
ಕೆಲವರು ಕೊಂಡರು

ಯಾರು ಇಲ್ಲದಾಗ ವಿಚಾರಿಸಿದೆ
"ಹೇಗಿದೆ ವ್ಯಾಪಾರ?"
"ಏನಿಲ್ಲ ಸರ್,
ಮುಂಚೆ ಲಾಟರಿ ವ್ಯಾಪಾರವೇ
ಉತ್ತಮವಾಗಿತ್ತು
ನಾಕು ಕಾಸು ಉಳೀತಿತ್ತು
ಈಗ ಹೊಟ್ಟೇಪಾಡಿಗೇ ಸರಿ"
ಮೊದಲು
ಅವರಿವರ ಆಸೆ ನಂಬಿಕೆಗಳ ಮಾರುತ್ತಿದ್ದವ
ಈಗ
ತನ್ನದೇ ಆಸೆ ನಂಬಿಕೆಗಳ ಮಾರುತ್ತಿದ್ದಾನೆ

ತಮಿಳು ಮೂಲ:
ಸೋರ್ಣಭಾರತಿ(ಮುನಿಯಾಂಡಿ)
ಚಿತ್ರಕೃಪೆ: thrudviewfinder.blogspot.com

ಮರೆತು... ಬಿಡುವುದು...




ನಾನು ನಿನ್ನನ್ನು
ನೀನು ನನ್ನನ್ನು
ನಾನು ಅದನ್ನು
ನೀನು ಇದನ್ನು
ಮರೆವ ಪ್ರಯತ್ನದಲ್ಲಿದ್ದೇವೆ

ಯಾಕೆ?
ಅದು ಆಗ ಇತ್ತು ಈಗಿಲ್ಲ ಎಂದು
ಇದು ಈಗ ಇದೆ, ಮುಂದೆ ಇರುವುದಿಲ್ಲ ಎಂದು
ಯುದ್ಧ ಮಾಡಿದ ಹಿಟ್ಲರ್
ಯುದ್ಧ ನಿಲ್ಲಿಸಿದ ಅಶೋಕ
ನಾಡ ಕಟ್ಟಿದವರ, ಕೆಡವಿದವರ
ಮರೆಯದಿರಲು
ನಾಕು ಪೀರಿಯಡ್ ಇತಿಹಾಸ
ಅವಳವೊಂದಷ್ಟು ಸುಡಲಾಗದ ಕಾಗದಗಳು
ಅವನು ಹುಟ್ಟಿದ್ದಕ್ಕೆ
ಇವನು ಸತ್ತದ್ದಕ್ಕೆ
ಜಯಂತಿಗಳು ಪುಣ್ಯ ಸ್ಮರಣೆಗಳು
ಹಳೆಯ ಪತ್ರಿಕೆಗಳು
ಮತ್ತೆ ಗ್ರಂಥಾಲಯಗಳು
ಜೊತೆಗೆ ದಿನಕ್ಕೆ ಮೂರು ಹೊತ್ತು ಶಂಖಪುಷ್ಠಿ

ನಿನ್ನೆಯ ಬದಲಾಯಿಸಲಾಗದ್ದಕ್ಕೆ
ನಾಳೆಯ ಚಂದದ ಅರಿವಿಲ್ಲದೆ
ನಿನ್ನೆಯ ರಕ್ತದ ಕಲೆಗಳ ಮರೆಯದೆ
ಇಂದು ಬಂದೂಕನಿಡಿದು
ನಾಳೆಯ ಕೊಲ್ಲಲು ಹೊರಟಿರುವೆ

ಇಂದು ಇರುವುದೊಂದು
ಬಂದ ನಿನ್ನೆಗಳು ಬರುವ ನಾಳೆಗಳು ಹಲವು

ಒಂದಷ್ಟು ’ಪಾಪ’ಗಳು
ಮತ್ತಷ್ಟು ಪಾಪಪ್ರಜ್ಞೆಗಳು
ಮರೆವ ’ಪ್ರಯತ್ನ’ಗಳೆಲ್ಲ ಖೊಟ್ಟಿಯಲ್ಲವೇ?
ನೆನಪೇ ಬಾರದಿರುವುದು ಮರೆವಲ್ಲವೇ?

ಅಲ್ಲಿ ವಿಭಜನೆಯ ಮರೆತು
ಅವಳ ಮೊದಲ ಭೇಟಿಯ ಮರೆತು
ರೈಲು ತುಂಬಿದ ಹೆಣಗಳ ಮರೆತು
ಕೊಟ್ಟ ಮಾತು ಸತ್ತಿದ್ದ ಮರೆತು
ಸುತ್ತ ಸಿಡಿವ ಬಾಂಬುಗಳ ಮರೆತು
ನಿನ್ನೆ ಊಟದಲ್ಲಿ ಬಿದ್ದಿದ್ದ ಜಿರಲೆಯ ಮರೆತು
ಮುಂಬಯಿ ದಾಳಿಯ ಮರೆತು

ಅದೇ ಬದುಕ
ಅದೇ ಊರಿನ
ಅದೇ ಬೀದಿಯ
ಅದೇ ಹೋಟೆಲಿನ
ಅದೇ ತಟ್ಟೆಯಲಿ
ಅದೇ ಮುಗುಳ್ನಗೆಯೊಂದಿಗೆ ಸವಿಯುತ್ತಿದ್ದೇನೆ

-ನವೀನ್ ಹಳೇಮನೆ, ೧೦ನೇ ಜನವರಿ, ೨೦೦೯

Monday, January 5, 2009

ಕಾವ್ಯ





ಇಲ್ಲಿ ಅಂಗೈ ಅಗಲ ಭೂಮಿ

ಅಲ್ಲಿ ಬಲಿತು ಬಿಸಿಗೆ ಚಟ್ಟೆಂದು ಸಿಡಿದು ಬೀಳುವ ಬೀಜ

ಅದಕೊಂದು ಮೂಲ

ಅದಕೊಂದು ಕಾಲ

ಕನವರಿಕೆಗಳಲ್ಲಿ ಆರಂಭ ಬದುಕು

ಕಲಿತದ್ದ ಜಗಕೆ ತೋರುವ ತವಕ



ಇಲ್ಲೊಂದು ಪ್ರಾಸ

ಅಲ್ಲೊಂದು ಲಯ

ಮಾತ್ರೆ ಗಣಗಳ ಎಣಿಸಿ ಉದುರಿಸಿದ ಮುತ್ತುಗಳು

ಹೆಜ್ಜೆ ಇಡುತ ಮೆಲ್ಲಗೆ

ಜಗವ ಗೆಲ್ಲುವ ತವಕ






ಹೀಗೇ ರಾಗವಾಗಿ ಹರಿದು

ಹಳದಿ ಚಿಗುರುಗಳು ಹಸಿರಾಗಿ ಬೆಳೆದು

ಹೀಗೊಂದು ಟಿಸಿಲೊಡೆದು

ಕಾಯಾಗಿ ಹೂ ಬಿಟ್ಟು ಹಣ್ಣಾಗಿ

ಕಳಿತು ಜಾಣನೊಬ್ಬನ ಮಡಿಲಿಗುದುರಿ

ಕಚ್ಚಿ ತಿಂದವ ಕಾಣದ ರುಚಿಯ ಬಾಯಿ ಚಪ್ಪರಿಸಿ ಹೇಳಿ

ಇನ್ನೂ ತಿನ್ನಲಿದ್ದವರ ದಾರಿತಪ್ಪಿಸಿರುವಾಗ...


ಬೀಜದಲಿ, ಮೊಳಕೆಯಲಿ, ಕೊಂಬೆಯಲಿ, ಚಿಗುರಿನಲಿ,

ನಿರಂತರ ಹುಡುಕಾಟ

ಕಳೆದುಹೋದದ್ದಕ್ಕೆ

ಕಳೆದುಹೋದಂತೆ ಕಾಣುತ್ತಿರುವುದರಲ್ಲಿ



ಮರದ ಸಾರ್ಥಕತೆ ಕಡಿದು ಉರಿಸುವವರಿಗಾಗಿಯೇ?

ತೆಂಗಿನೊಳು ನೀರಿರುವುದು ಕುಡಿಯುವವರಿಗಾಗಿಯೇ?






ಈಗ ಹೇಳು

ನೀ ಹುಟ್ಟಿದ್ದು ಯಾಕೆ?

ಖುಷಿಗೇ? ಗುರಿಗೇ?

ಅಥವಾ ಬರೀ ಆಕಸ್ಮಿಕವೆ?