Tuesday, March 10, 2009

ಗೆರೆಗಳು ಮತ್ತು ಅಕ್ಷರಗಳು...



ಸಿಕ್ಕುವುದಾದರೆ


ಸಿಕ್ಕಿಬಿಡಲಿ


ಹೆಕ್ಕಿಬಿಡುತ್ತೇನೆ


ಮೌನ ಮುರಿದ


ಮಾತುಗಳನ್ನ



ಗೆರೆಯಾಗಲೀ, ಅಕ್ಷರವಾಗಲೀ ಹುಟ್ಟುವುದು ಚುಕ್ಕಿಯೊಂದರಿಂದಲೇ. ಮಿತ್ರ ಕೃಷ್ಣ ರಾಯಚೂರು ತಮ್ಮ ಎರಡನೇ ಪುಸ್ತಕದೊಂದಿಗೆ ಬಂದಿದ್ದಾರೆ. ಮೊದಲ ವಿನ್ಯಾಸದ ಹೊರಗೆ ಕೃತಿಯ ದಾರಿಯಲ್ಲೇ ಮುಂದುವರಿದು "ಜೋಳಿಗೆಯಲ್ಲೊಂದು ಅಗುಳು" ತಂದು ನಮ್ಮ ಮಡಿಲಿಗೆ ಹಾಕಿದ್ದಾರೆ...

ಕವಿಗಳ ಮತ್ತು ಕಲಾವಿದರ ಯೋಚನೆಗಳು ಮುಂಚಿನಿಂದಲೂ ತೀರಾ ಭಿನ್ನವಾದುವಲ್ಲ. ಬೇರೆ ಬೇರೆ ದಾರಿಗಳಲ್ಲಿ ಹೊರಟು ಒಂದೇ ಊರಿಗೆ ಸೇರುವ ದಾರಿಹೋಕರಿವರು. ಕೃಷ್ಣ ಅವರು ಅವೆರಡನ್ನು ಜೊತೆಗೆ ತಂದಿದ್ದಾರೆ. ತಮಗೆ ಮಿತಿಗಳಿವೆ ಎಂದು ಹೇಳುತ್ತಲೇ ಸರಳ ವಿನ್ಯಾಸದ ರೇಖೆಗಳೊಂದಿಗೆ ಸರಳ ಪದಗಳ ಕವಿತೆಗಳನ್ನು ಸೃಷ್ಠಿಸಿ ಗಹನವಾದ ಹಲವು ವಿಷಯಗಳನ್ನು ಹೇಳಿದ್ದಾರೆ. ಇವನ್ನು ಚುಟುಕು ಅಥವಾ ಹನಿಗವಿತೆಗಳೆಂದು ಹೇಳಿ ತೂಕ ಕಡಿಮೆ ಮಾಡುವ ಮನಸ್ಸಾಗುತ್ತಿಲ್ಲ. ಇವು ಜಪಾನೀ ಹಾಯಿಕುಗಳಿಗೆ ಹತ್ತಿರವಾಗಿವೆ. ಹಾಯಿಕುಗಳು ಗಹನವಾದ ತತ್ವಗಳನ್ನು ಹೇಳಲು ಕೇವಲ ೧೭ ಶಬ್ಧಗಳನ್ನು ಬಳಸಿ, ಒಂದು ಲಯ, ಒಮ್ಮೆ ನಿಂತು ಇನ್ನೊಂದೆರಡು ಪದ ಹೇಳಿ ಮನದಾಳದಲ್ಲಿ ನಿಂತು ಬಿಡುತ್ತವೆ. ಕೃಷ್ಣ ಅವರ ಕವನಗಳು ಈ ರೀತಿಗೆ ತೀರ ಸನಿಹವಾಗಿವೆ..

ಮೇಲಿನದರ ಜೊತೆಗೆ ಇನ್ನೆರಡು ಸ್ಯಾಂಪಲ್‍ಗಳು:
ಅಡುಗೆ ಮನೆಯಲಿ
ಅನ್ನ ಬೆಂದಿದೆ
ಚಿಗುರೊಡೆವ
ಹಸಿರೆಲೆಯಂತೆ
* * *
ರೇಖೆಗಳ ಸರಸಕ್ಕೆ
ರಂಗಾದಳು
ತನುವೆಂಬ ಹುತ್ತದೊಳಗೆ
ಭಿತ್ತಿಯಾದಳು
(ಈ ಕವನಗಳನ್ನು ಹೀಗೆ ಅವರ ರೇಖಾಚಿತ್ರಗಳಿಲ್ಲದೆ, ಅನುಮತಿಯಿಲ್ಲದೇ ಪ್ರಕಟಿಸುತ್ತಿರುವುದಕ್ಕೆ ಕ್ಷಮೆ ಇರಲಿ)
ಮೃದು ಹಾಗೂ ಮಿತ ಮಾತಿನ ಕೃಷ್ಣರ ವ್ಯಕ್ತಿತ್ವವೇ ಮೂರ್ತಿವೆತ್ತಂತಿದೆ ಈ ಕೃತಿ.
ಪುಸ್ತಕವನ್ನು ಪ್ರಗತಿ ಗ್ರಾಫಿಕ್ಸ್ ನ ಡಾ. ಎಂ. ಬೈರೇಗೌಡರು ಹೊರತಂದಿದ್ದಾರೆ. ಪ್ರೊ ಕಿ. ರಂ. ಬಿಡುಗಡೆ ಮಾಡಿ, "ಕವನ ಅಂದ ತಕ್ಷಣ ೫೦ ಸಾಲು ಇರ್ಲೇ ಬೇಕೆನ್ರಿ? ಅದಕ್ಕೆ ಶೀರ್ಷಿಕೆ ಇರ್ಲೇ ಬೇಕಾ? ಅದೂ ಕವನದ ಇನ್ನೊಂದು ಸಾಲೇ ಅಲ್ವ? ಎಜ್ರಾ ಪೌಂಡ್ ಹೇಳುವಂತೆ ನಿಮ್ಮ ಇಡೀ ಜೀವನದಲ್ಲಿ ಒಂದು ಗಟ್ಟಿ ಇಮೇಜ್ ಸೃಷ್ಠಿಸಿಕೊಟ್ರೆ ಸಾಕಾಗಲ್ವ, ಅದು ಬಿಟ್ಟು ಅಷ್ಟೊಂದು ಬರೀಬೇಕಾ? ಇವನ್ನು ಹೀಗೇ ಅರ್ಥ ಮಾಡಿಕೊಳ್ಳಿ ಎಂಬ ಒತ್ತಾಯವನ್ನು ಹೇರದಿರುವ ಕವನಗಳು ಇಲ್ಲಿಯವು. ಕವನದ ಅರ್ಥ ಓದುವವನವೇ ಅಥವಾ ಬರೆದವನವೇ?" ಅಂದ್ರು.

ಕೃಷ್ಣರ ಕವನಗಳು ಮೆಲುದನಿಯವು, ಗೆರೆಗಳು ಮೃದುವಾದುವು... ಹುಷಾರಾಗಿ ಕೇಳಿ... ನೋಡಿ. ಇಲ್ಲದಿದ್ದರೆ ಅರ್ಥವೊಂದು ಕಳೆದು ಹೋದೀತು.

No comments:

Post a Comment